Back to Top
Previous ಪುರದ ನಾಗಣ್ಣ ಒಕ್ಕಲಿಗ ಮುದ್ದಣ್ಣ Next

ಕಿನ್ನರಿ ಬ್ರಹ್ಮಯ್ಯ ವಚನಗಳು

ವಚನ ಆಯ್ಕೆ ಮಾಡಿ:

ಆಯ್ಕೆ ಮಾಡಿದ ವಚನ
*
ಆಕಾರವೆಂಬೆನೆ ನಿರಾಕಾರವಾಗಿದೆ
ನಿರಾಕಾರವೆಂಬೆನೆ ಅತ್ತತ್ತ ತೋರುತ್ತದೆ.
ತನ್ನನಳಿದು ನಿಜವುಳಿದ
ಮಹಾಲಿಂಗ ತ್ರಿಪುರಾಂತಕನ ನಿಲವ ಕಂಡು ಒಳಕೊಂಡ
ಮರುಳಶಂಕರದೇವರ ಮೂರ್ತಿಯ ನಿಮ್ಮಿಂದ ಕಂಡು
ಬದುಕಿದೆನು ಕಾಣಾ ಸಂಗನಬಸವಣ್ಣಾ./1
ಆವ ಮಡಕೆಯಾಗಲಿ ಸ್ವಾದ ಸಾಕಾರದಲ್ಲಿ ಭೇದವಲ್ಲ.
ಮಣ್ಣ ಮಡಕೆ ಒಕ್ಕಲಿಗನಲ್ಲಿ,
ಚಿನ್ನದ ಮಡಕೆ ಅರಮನೆಯಲ್ಲಿ.
ಅರಮನೆ ಗುರುಮನೆ ಹಿರಿದಾದ ಕಾರಣ-
ಹಾದರ ಸಲ್ಲದು ಕಾಣಾ, ತ್ರಿಪುರಾಂತಕಲಿಂಗವೆ!/2
ಆಶ್ರಯ ನಿರಾಶ್ರಯ ಹರಪುರಾತರಿಗಲ್ಲದೆ ಕಿರಾತರಿಗುಂಟೆ?
ಆಶ್ರಯಿಸಬಹುದು ಪ್ರಭುವಿನ ನುಡಿಯ;
ಆಶ್ರಯಿಸಬಹುದು ಹರಗಣಂಗಳ ನುಡಿಯ.
ಅದೇನು ಕಾರಣವೆಂದಡೆ: ಕಾರಣವಿಲ್ಲದೆ ಕಂಡಂತಾದರು
ತ್ರಿಪುರಾಂತಕಲಿಂಗ ಶರಣರು ಚೆನ್ನಬಸವಯ್ಯಾ./3
ಕಲ್ಲಿಲಿಟ್ಟವಂಗೊಲಿದೆ, ಕಾಲಲೊದ್ದವಂಗೊಲಿದೆ,
ಬಾಯಲ್ಲಿ ಉಗಿದವಂಗೊಲಿದೆ.
ಅದು ನಿನ್ನ ಭಕ್ತಿಯೋ ಸತ್ಯವೋ ಗರ್ವವೋ!
ತ್ರೈಭುವನಂಗಳಿಗಭೇದ್ಯ ತಿಳಿವಡೆ ನಿನ್ನ ಮಹಿಮೆ,
ಉಮೆಯ ವರ ತ್ರಿಪುರಾಂತಕಲಿಂಗವೆ./4
ಕಲ್ಲೊಳಗಣ ಬೆಲ್ಲವ ಮೆದ್ದವರಿನ್ಯಾರೊ?
ಕಲ್ಲನೆ ಹಿಡಿದು ಬಿಡದೆ ಹಾರುವಿರಿ.
ಕಲ್ಲು ಹಲ್ಲನೆ ಕಳೆಯಿತ್ತು,
ಬಲ್ಲವರಿದ ಹೇಳಿ.
ಕಲ್ಯಾಣದ ತ್ರಿಪುರಾಂತಕ ನೀನೆ ಬಲ್ಲೆಯಯ್ಯಾ./5
ಕಾಯದಲ್ಲಿ ಕಳವಳವಿರಲು,
ಪ್ರಾಣದಲ್ಲಿ ಮಾಯೆಯಿರಲು,
ಏತರ ಗಮನ ಏತರ ನಿರ್ವಾಣ.
ಮಹಾಲಿಂಗ ತ್ರಿಪುರಾಂತಕ ನಿನ್ನ ಸಂಹಾರಿ ಎಂಬನಲ್ಲದೆ
ಸಜ್ಜನೆಯೆಂದು ಕೈವಿಡಿವನಲ್ಲ./6
ಚಂದ್ರನ ಸೂಡುವವ ಲಿಂಗನೊ ಅಂಗನೊ?
ಸುಸಂಗದ ಮುಕುಟದಲ್ಲಿ ಗಂಗೆಯ ಧರಿಸುವವ ಭಂಗನೊ ಆಭಂಗನೊ?
ಭಕ್ತರಂಗದಿಚ್ಛೆಯಲ್ಲಿ ಅಡಗುವವ ಬಂಧನೊ ನಿರ್ಬಂಧನೊ?
ಇದು ನನಗೆ ಸಂದೇಹವಾಗಿದೆ.
ತ್ರೈಭುವನಂಗಳಿಗೆ ಚೋದ್ಯ ನಿಮ್ಮ ಪರಿ,
ಅಂಬಿಕಾವರ ತ್ರಿಪುರಾಂತಕಲಿಂಗವೆ./7
ಚನಿಪಾಲ ಚಿನ್ನದ ಹರಿವಾಣದಲ್ಲಿ ಭೋಗಿಪುದು
ಭೂಷಣವಲ್ಲದೆ,
ಮಣ್ಣ ಹರಿವಾಣದಲ್ಲಿ ಭೂಷಣವೆ?
ತಾ ಮಾಳ್ಪ ಶಿವಲಿಂಗ ಪೂಜೆಗೆ ಕಾಯ ಪವಿತ್ರವಲ್ಲದೆ,
ಅಪವಿತ್ರವೆಂತೊ ತ್ರಿಪುರಾಂತಕಲಿಂಗವೆ?/8
ತನು ಸೆಜ್ಜೆ ಮನ ಲಿಂಗವಾದ ಬಳಿಕ
ಆನು ಮತ್ತೆ ಬೇರೆ ಅರಸಲುಂಟೆ?
ತನುವೆ ಬಸವಣ್ಣ ಮನವೇ ಪ್ರಭುದೇವರೆಂಬ
ಮಹಾ ಘನವನೊಳಕೊಂಡಿರ್ದ ಬಳಿಕ
ಗುಣಾವಗುಣವ ಸಂಪಾದಿಸುವರೆ?
ಮಹಾಲಿಂಗ ತ್ರಿಪುರಾಂತಕದೇವ, ಸಂಗನ ಬಸವಣ್ಣನಲ್ಲಿ
ನಿಮ್ಮಡಿಗಳಲ್ಲಿ ಸಂದು ಸಂಶಯವುಂಟೆ?
ಬಿಜಯಂಗೈವುದಯ್ಯಾ ಪ್ರಭುವೆ./9
ನಿನ್ನ ಸ್ವರೂಪ ಕಂಡೆನ್ನ ದೃಷ್ಟಿ ನಟ್ಟುದೆನಗೆ.
ನಿನ್ನ ಲಾವಣ್ಯರಸವ ಕಂಡು ಮನ ಹಾರೈಸಿತ್ತೆನಗೆ.
ನಿನ್ನ ಪ್ರವುಡಿಯಿಂದ ಕೂಡಿದೆನೆಂಬುದು ಭಾವದಲ್ಲಿ
ಬಚ್ಚಬರಿಯ ಹೆಂಗುಸಾಗಿ ತೋರಿತ್ತೆನೆಗೆ.
ಮಹಾಲಿಂಗ ತ್ರಿಪುರಾಂತಕನೆನಗೊಡ್ಡಿದ ಮಾಯೆಯ
ನಿನ್ನ ಸಮಸುಖ ಕೂಟದೊಳಿರ್ದು ಶಿವಭಾವಭಕ್ತಿಯಿಂ
ಗೆಲುವೆನು ಮಹಾ ಹೆಣ್ಣು ಎಂದು ಕೈವಿಡಿದೆನು./10

ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001

*
Previous ಪುರದ ನಾಗಣ್ಣ ಒಕ್ಕಲಿಗ ಮುದ್ದಣ್ಣ Next