![]() | ಆಯ್ದಕ್ಕಿ ಲಕ್ಕಮ್ಮ | ಅಕ್ಕಮ್ಮ | ![]() |
ಆಯ್ದಕ್ಕಿ ಮಾರಯ್ಯ ವಚನಗಳು |
ಆಯ್ಕೆ ಮಾಡಿದ ವಚನ |
---|
ಅಂಧಕಂಗೆ ಜೀವವಿದ್ದಡೆ ಕಣ್ಣಿದ್ದಂತೆ ಕಂಡು ನಡೆಯಬಲ್ಲನೆ ? ನೀ ಸತಿಯಾಗಿ ನಾ ಪತಿಯಾಗಿ ಉಭಯ ಪ್ರಾಣ ಏಕರೂಪಾಗಿ ಎನ್ನಂಗದ ಅಂಗನೆ ಅಮರೇಶ್ವರಲಿಂಗವ ತೋರಾ./1 |
ಅಮೃತದ ಸವಿ ಸ್ವಾದಿಸುವರಿಗಲ್ಲದೆ ಅಮೃತ ತನ್ನ ತಾ ಸ್ವಾದಿಸದ ಪರಿಯಂತೆ ನಿತ್ಯತೃಪ್ತಂಗೆ ಅಪ್ಯಾಯನ ಉಂಟೇ ಬಸವಣ್ಣಾ ? ಏಳ್ನೂರೆಪ್ಪತ್ತಮರಗಣಂಗಳ ಕಟ್ಟಳೆಯ ನೇಮದ ಕಟ್ಟು ನಿನ್ನದು ಬಸವಣ್ಣಾ. ನಿನಗೆ ಭಾವ ನಿರ್ಭಾವವೆಂಬುದುಂಟೇ ಬಸವಣ್ಣಾ ? ಅಮರೇಶ್ವರಲಿಂಗದಲ್ಲಿ ಸಂಗನಬಸವಣ್ಣಾ, ನಿನ್ನ ಪಾದಕ್ಕೆ ನಮೋ ನಮೋ ಎಂಬೆನು./2 |
ಅಹಂಕಾರವರತಲ್ಲದೆ ಗುರುಭಕ್ತನಲ್ಲ, ಬಯಕೆ ಹಿಂಗಿಯಲ್ಲದೆ ಶಿವಲಿಂಗಪೂಜಕನಲ್ಲ, ತ್ರಿವಿಧ ಮಲತ್ರಯದ ಬಲುಹುಳ್ಳನ್ನಕ್ಕ ಚರಸೇವಿಯಲ್ಲ. ಇಂತೀ ಗುಣಂಗಳಲ್ಲಿ ನಿಶ್ಚಯವಾದಲ್ಲದೆ, ಅಮರೇಶ್ವರಲಿಂಗವನರಿಯಬಾರದು./3 |
ಎನಗೆ ಮನೆ ಇಲ್ಲ, ಎನಗೆ ಧನವಿಲ್ಲ, ಮಾಡುವುದೇನು ? ನೀಡುವುದೇನು ? ಮನೆ ಧನ ಸಕಲಸಂಪದಸೌಖ್ಯವುಳ್ಳ ನಿಮ್ಮ ಶರಣರ ತಪ್ಪಲಕ್ಕಿಯನಾಯ್ದು ತಂದು, ಎನ್ನೊಡಲ ಹೊರೆವೆನಾಗಿ, ಅಮರೇಶ್ವರಲಿಂಗಕ್ಕೆ ನೀಡುವ ಬಯಕೆ ಎನಗಿಲ್ಲ ಸಂಗನಬಸವಣ್ಣಾ./4 |
ಒಂದ ಬಿಟ್ಟು ಒಂದ ಕಂಡೆಹೆನೆಂದಡೆ, ಅದು ಕಾಣಬಾರದ ಬಯಲು. ಒಂದರಲ್ಲಿ ಸಲೆ ಸಂದು ಹಿಂಗದ ಭಾವ ನೆಲೆಗೊಂಡಲ್ಲಿ ಅಮರೇಶ್ವರಲಿಂಗವು ತಾನೆ./5 |
ಕಟ್ಟಿಗೆ ಕಸ ನೀರು ತಂದು, ಸತ್ಯರ ಮನೆಯಲ್ಲಿ ಒಕ್ಕುದನೀಸಿಕೊಂಡು, ತನ್ನ ಕೃತ್ಯ ತಪ್ಪದೆ ಒಕ್ಕುದ ಕೊಂಡು, ಸತ್ಯನಾಗಿಪ್ಪ ಭಕ್ತನಂಗವೆ ಅದು ಅಮರೇಶ್ವರಲಿಂಗದ ಸಂಗ./6 |
ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು, ಲಿಂಗಪೂಜೆಯಾದಡೂ ಮರೆಯಬೇಕು, ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು. ಕಾಯಕವೆ ಕೈಲಾಸವಾದ ಕಾರಣ. ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು/7 |
ಗಂಗೆವಾಳುಕ ಸಮಾರುದ್ರರೆಲ್ಲರು ತಾವು ತಾವು ಬಂದಲ್ಲಿಯೆ ಬಟ್ಟೆಯ ಮೆಟ್ಟಿದಂತಾದರು. ಪ್ರಮಥಗಣಂಗಳೆಲ್ಲರು ಪ್ರಮಾಣಿಸಿದಲ್ಲಿ ಹರಿದರು, ಎನಗೆ ಕರಿಗೊಂಬ ಅರಿವೆಲ್ಲಿ ಅಮರೇಶ್ವರಲಿಂಗಾ ?/8 |
ಗಣಸಮೂಹವೆಂದು ಕೂಡಿ ಮಾಡುವಲ್ಲಿ ಸಮಯದ ನೋವು ಭೂರಿಗೀಡಾಗಿ, ಮಾಟದ ಸಂದೇಹವ ಹೊತ್ತು ಮಾತಿಂಗೊಳಗಾದಲ್ಲಿ, ಭಕ್ತಿಯ ನೀತಿ ಸಿಕ್ಕಿತ್ತು, ಅಮರೇಶ್ವರಲಿಂಗಕ್ಕೆ ದೂರವಾಯಿತ್ತು./9 |
ಗುರುಪೂಜೆಯ ಮಾಡುವಲ್ಲಿ ಗುರುಪೂಜೆಯಲ್ಲಿಯೇ ಮುಕ್ತರು, ಲಿಂಗಪೂಜೆಯ ಮಾಡುವಲ್ಲಿ ಲಿಂಗಪೂಜೆಯಲ್ಲಿಯೇ ಮುಕ್ತರು, ಜಂಗಮಪೂಜೆಯ ಮಾಡುವಲ್ಲಿ ಜಂಗಮಪೂಜೆಯಲ್ಲಿಯೇ ಮುಕ್ತರು. ಮೂರೊಂದಾಗಲಾಗಿ ಬೇರೊಂದಂಗವಿಲ್ಲ. ಆಗುಚೇಗೆ ಮೂರರಲ್ಲಿ ಅಡಗಿದ ಮತ್ತೆ ಅಮರೇಶ್ವರಲಿಂಗವ ಪೂಜಿಸಲಿಲ್ಲ./10 |
ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001
![]() | ಆಯ್ದಕ್ಕಿ ಲಕ್ಕಮ್ಮ | ಅಕ್ಕಮ್ಮ | ![]() |