Back to Top
Previous ಆಯ್ದಕ್ಕಿ ಲಕ್ಕಮ್ಮ ಅಕ್ಕಮ್ಮ Next

ಆಯ್ದಕ್ಕಿ ಮಾರಯ್ಯ ವಚನಗಳು

ವಚನ ಆಯ್ಕೆ ಮಾಡಿ:

ಆಯ್ಕೆ ಮಾಡಿದ ವಚನ
*
ಅಂಧಕಂಗೆ ಜೀವವಿದ್ದಡೆ ಕಣ್ಣಿದ್ದಂತೆ ಕಂಡು ನಡೆಯಬಲ್ಲನೆ ?
ನೀ ಸತಿಯಾಗಿ ನಾ ಪತಿಯಾಗಿ
ಉಭಯ ಪ್ರಾಣ ಏಕರೂಪಾಗಿ
ಎನ್ನಂಗದ ಅಂಗನೆ ಅಮರೇಶ್ವರಲಿಂಗವ ತೋರಾ./1
ಅಮೃತದ ಸವಿ ಸ್ವಾದಿಸುವರಿಗಲ್ಲದೆ
ಅಮೃತ ತನ್ನ ತಾ ಸ್ವಾದಿಸದ ಪರಿಯಂತೆ
ನಿತ್ಯತೃಪ್ತಂಗೆ ಅಪ್ಯಾಯನ ಉಂಟೇ ಬಸವಣ್ಣಾ ?
ಏಳ್ನೂರೆಪ್ಪತ್ತಮರಗಣಂಗಳ ಕಟ್ಟಳೆಯ
ನೇಮದ ಕಟ್ಟು ನಿನ್ನದು ಬಸವಣ್ಣಾ.
ನಿನಗೆ ಭಾವ ನಿರ್ಭಾವವೆಂಬುದುಂಟೇ ಬಸವಣ್ಣಾ ?
ಅಮರೇಶ್ವರಲಿಂಗದಲ್ಲಿ ಸಂಗನಬಸವಣ್ಣಾ,
ನಿನ್ನ ಪಾದಕ್ಕೆ ನಮೋ ನಮೋ ಎಂಬೆನು./2
ಅಹಂಕಾರವರತಲ್ಲದೆ ಗುರುಭಕ್ತನಲ್ಲ,
ಬಯಕೆ ಹಿಂಗಿಯಲ್ಲದೆ ಶಿವಲಿಂಗಪೂಜಕನಲ್ಲ,
ತ್ರಿವಿಧ ಮಲತ್ರಯದ ಬಲುಹುಳ್ಳನ್ನಕ್ಕ ಚರಸೇವಿಯಲ್ಲ.
ಇಂತೀ ಗುಣಂಗಳಲ್ಲಿ ನಿಶ್ಚಯವಾದಲ್ಲದೆ,
ಅಮರೇಶ್ವರಲಿಂಗವನರಿಯಬಾರದು./3
ಎನಗೆ ಮನೆ ಇಲ್ಲ, ಎನಗೆ ಧನವಿಲ್ಲ,
ಮಾಡುವುದೇನು ? ನೀಡುವುದೇನು ?
ಮನೆ ಧನ ಸಕಲಸಂಪದಸೌಖ್ಯವುಳ್ಳ
ನಿಮ್ಮ ಶರಣರ ತಪ್ಪಲಕ್ಕಿಯನಾಯ್ದು ತಂದು,
ಎನ್ನೊಡಲ ಹೊರೆವೆನಾಗಿ,
ಅಮರೇಶ್ವರಲಿಂಗಕ್ಕೆ ನೀಡುವ ಬಯಕೆ ಎನಗಿಲ್ಲ ಸಂಗನಬಸವಣ್ಣಾ./4
ಒಂದ ಬಿಟ್ಟು ಒಂದ ಕಂಡೆಹೆನೆಂದಡೆ,
ಅದು ಕಾಣಬಾರದ ಬಯಲು.
ಒಂದರಲ್ಲಿ ಸಲೆ ಸಂದು ಹಿಂಗದ ಭಾವ ನೆಲೆಗೊಂಡಲ್ಲಿ
ಅಮರೇಶ್ವರಲಿಂಗವು ತಾನೆ./5
ಕಟ್ಟಿಗೆ ಕಸ ನೀರು ತಂದು,
ಸತ್ಯರ ಮನೆಯಲ್ಲಿ ಒಕ್ಕುದನೀಸಿಕೊಂಡು,
ತನ್ನ ಕೃತ್ಯ ತಪ್ಪದೆ ಒಕ್ಕುದ ಕೊಂಡು,
ಸತ್ಯನಾಗಿಪ್ಪ ಭಕ್ತನಂಗವೆ ಅದು ಅಮರೇಶ್ವರಲಿಂಗದ ಸಂಗ./6
ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು,
ಲಿಂಗಪೂಜೆಯಾದಡೂ ಮರೆಯಬೇಕು,
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು.
ಕಾಯಕವೆ ಕೈಲಾಸವಾದ ಕಾರಣ.
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು/7
ಗಂಗೆವಾಳುಕ ಸಮಾರುದ್ರರೆಲ್ಲರು
ತಾವು ತಾವು ಬಂದಲ್ಲಿಯೆ ಬಟ್ಟೆಯ ಮೆಟ್ಟಿದಂತಾದರು.
ಪ್ರಮಥಗಣಂಗಳೆಲ್ಲರು ಪ್ರಮಾಣಿಸಿದಲ್ಲಿ ಹರಿದರು,
ಎನಗೆ ಕರಿಗೊಂಬ ಅರಿವೆಲ್ಲಿ ಅಮರೇಶ್ವರಲಿಂಗಾ ?/8
ಗಣಸಮೂಹವೆಂದು ಕೂಡಿ ಮಾಡುವಲ್ಲಿ
ಸಮಯದ ನೋವು ಭೂರಿಗೀಡಾಗಿ, ಮಾಟದ ಸಂದೇಹವ ಹೊತ್ತು
ಮಾತಿಂಗೊಳಗಾದಲ್ಲಿ, ಭಕ್ತಿಯ ನೀತಿ ಸಿಕ್ಕಿತ್ತು,
ಅಮರೇಶ್ವರಲಿಂಗಕ್ಕೆ ದೂರವಾಯಿತ್ತು./9
ಗುರುಪೂಜೆಯ ಮಾಡುವಲ್ಲಿ ಗುರುಪೂಜೆಯಲ್ಲಿಯೇ ಮುಕ್ತರು,
ಲಿಂಗಪೂಜೆಯ ಮಾಡುವಲ್ಲಿ ಲಿಂಗಪೂಜೆಯಲ್ಲಿಯೇ ಮುಕ್ತರು,
ಜಂಗಮಪೂಜೆಯ ಮಾಡುವಲ್ಲಿ ಜಂಗಮಪೂಜೆಯಲ್ಲಿಯೇ ಮುಕ್ತರು.
ಮೂರೊಂದಾಗಲಾಗಿ ಬೇರೊಂದಂಗವಿಲ್ಲ.
ಆಗುಚೇಗೆ ಮೂರರಲ್ಲಿ ಅಡಗಿದ ಮತ್ತೆ
ಅಮರೇಶ್ವರಲಿಂಗವ ಪೂಜಿಸಲಿಲ್ಲ./10

ಗ್ರಂಥಋಣ: ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು. 2001

*
Previous ಆಯ್ದಕ್ಕಿ ಲಕ್ಕಮ್ಮ ಅಕ್ಕಮ್ಮ Next