*
    
        ಲಿಂಗವಂತನಿಗೆ ಕುಂಕುಮಧಾರಣೆ ನಿಷಿದ್ಧ.                      
        
            ಕೊಂಬನೂದುವ ಹೊಲೆಯಂಗೆ
            ಕುಂಕುಮ ಹಣೆಯಲ್ಲಲ್ಲದೆ ಶ್ರೀವಿಭೂತಿ ಒಪ್ಪುವುದೆ?
            ಲಿಂಗಲಾಂಛನವ ತೊಟ್ಟು, ಗುರೂಪದೇಶವ ಹೇಳಿ,
            ನೊಸಲಲ್ಲಿ ವಿಭೂತಿಪಟ್ಟವ ಕಟ್ಟಿದ ಬಳಿಕ,
            ಮರಳಿ ಗುರುನಿಂದಕನಾಗಿ,
            
                ಹಣೆಯಲ್ಲಿ ಕುಂಕುಮಾದಿ ತಿಲಕವ ಕೊಂಡಡವನಾ
                ಕೊಂಬಿನ ಹೊಲೆಯಂಗಿಂದ ಕನಿಷ್ಠವೆಂದ,
             ಕಲಿದೇವಯ್ಯ. /571 - ಶ್ರೀ ಮಡಿವಾಳ ಮಾಚಿದೇವರು
            
            ಲಿಂಗವಂತ ಸ್ತ್ರೀಯರಿಗೂ ಕುಂಕುಮ ಧಾರಣೆ ನಿಷಿದ್ಧ 
            
            ಬಸವ ಮೊದಲಾದ ಮಹಾಪ್ರಮಥಗಣಂಗಳ ಸಮೂಹಕ್ಕೆ ಕಾರಣರಾದ,
            ಮರ್ತ್ಯಲೋಕದ ಮಹಾಗಣಂಗಳ ಅಂಶೋದ್ಧಾರಕರಾದ,
            ಲಿಂಗಾಚಾರ ಭಕ್ತಮಾಹೇಶ್ವರರ ಪಾಣಿಗ್ರಹಣ *ಕ್ರಿಯಾಶಕ್ತಿಯರು*
            ಸದಾವಾಸ ಪರಿಯಂತರ ಇಷ್ಟಮಹಾಲಿಂಗವ
            ತಮ್ಮ ಅಂಗವ ಬಿಟ್ಟು ಅಗಲಿಸಲಾಗದು.
            ನಿರಂತರ ಶ್ರೀಗುರುಲಿಂಗಜಂಗಮದ ಚರಣೋದ್ಧೂಳನವನ್ನು
            ಲಲಾಟದಲ್ಲಿ ತ್ರಿಪುಂಡ್ರ ರೇಖೆಗಳ ಧರಿಸಿ,
            ಮಂತ್ರಸ್ಮರಣೆಯಿಂದ ಲಿಂಗಜಂಗಮಕ್ಕೆ ಪಾಕವ ಮಾಡಿ ಸಮರ್ಪಿಸಿ,
            ಕುಶಬ್ದವನಳಿದು ಆಚರಿಸುವದೆ ಸತ್ಯಸದಾಚಾರ.
            ಈ ಸನ್ಮಾರ್ಗವ ಬಿಟ್ಟು, ಭವಿಪ್ರಾಣಿಗಳಂತೆ ಸರ್ವಾಂಗಕ್ಕೆ ಹಚ್ಚೆಯನೂರಿಸಿಕೊಂಡು,
            ಲಲಾಟದಲ್ಲಿ ಕುಂಕುಮಗಂಧದ ಬೊಟ್ಟು, ಏಕಾಂತವಾಸದಲ್ಲಿ ಹಲವು ಪ್ರಸಂಗ.
            ಭವಿಜನ್ಮಾತ್ಮರು ತೊಳೆದ ಹೊದಿಕೆ, ಅವರ ಸಂಸರ್ಗ ಮೊದಲಾದ
            ದುಷ್ಕೃತ್ಯವ ಮಾಡಿದಲ್ಲಿ ಕಂಡು ಸುಮ್ಮನಿರಲಾಗದು.
            ಭಕ್ತಮಾಹೇಶ್ವರರು ಆ ಸ್ತ್ರೀಯರಿಗೆ ಪ್ರತಿಜ್ಞೆಯ ಮಾಡು(ಡಿಸು)ವದು.
            ಅದ ಮೀರಿದಡೆ ಅವರಿಂದ ಪಾಕವ ಕೊಳ್ಳಲಾಗದು.
            ಈ ಮಾರ್ಗವನಾಚರಿಸದಿರ್ದಂಥ ಭಕ್ತನಲ್ಲಿ, ಗುರುಚರಮೂರ್ತಿಗಳು,
            ಅವನ ಮನೆಯ ಹೊಕ್ಕು, ಲಿಂಗಾರ್ಚನೆ ಲಿಂಗಾರ್ಪಣವ ಮಾಡಲಾಗದು.
            ಗುರುವಾಕ್ಯವ ಮೀರಿ, ಅರ್ಥದಿಚ್ಫೆಗೆ ಹೊಕ್ಕು ಬೆರಸಿದಡೆ,
            ಅನಾದಿ ಗುರುಲಿಂಗಜಂಗಮ ಭಕ್ತಪ್ರಸಾದಕ್ಕೆ ಹೊರಗಾಗಿ,
            ಅಂತ್ಯದಲ್ಲಿ ಶತಸಹಸ್ರ ವೇಳೆ ಶುನಿಸೂಕರಾದಿಗಳಲ್ಲಿ
            ಬಪ್ಪುದು ತಪ್ಪದು ನೋಡಾ, ಕಲಿದೇವರದೇವ. /684 - ಶ್ರೀ ಮಡಿವಾಳ ಮಾಚಿದೇವರು 
            
            ಆನೆಯನೇರಿಕೊಂಡು ಹೋದಿರೇ ನೀವು, 
            ಕುದುರೆಯನೇರಿಕೊಂಡು ಹೋದಿರೇ ನೀವು, 
            ಕುಂಕುಮ ಕಸ್ತೂರಿಯ ಹೂಸಿಕೊಂಡು ಹೋದಿರೇ ಅಣ್ಣಾ ! 
            ಸತ್ಯದ ನಿಲವನರಿಯದೆ ಹೋದಿರಲ್ಲಾ, 
            ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ ! 
            ಅಹಂಕಾರವೆಂಬ ಸದಮದಗಜವೇರಿ 
            ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ ! 
            ನಮ್ಮ ಕೂಡಲಸಂಗಮದೇವನರಿಯದೆ 
            ನರಕಕ್ಕೆ ಭಾಜನವಾದಿರಲ್ಲಾ 1/638 ! - ಗುರು ಬಸವಣ್ಣ.
        
     
    [1] ಈ ತರಹದ ಸಂಖ್ಯೆಯ ವಿವರ: ಸವಸ-1/554 :- ಸಮಗ್ರ ವಚನ ಸಂಪುಟ -1, ವಚನ ಸಂಖ್ಯೆ-554 (೧೫ ಸಮಗ್ರ         ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)