Previous ಬಸವಣ್ಣ ಕುರಿತು ಕವಿಗಳು ವಿಶ್ವಗುರು ಬಸವಣ್ಣನವರ ಸಂಕ್ಷಿಪ್ತ ಪರಿಚಯ Next

ಶಾಸನಗಳಲ್ಲಿ ಗುರು ಬಸವಣ್ಣ


ಶಾಸನಗಳಲ್ಲಿ ಗುರು ಬಸವಣ್ಣ

ಶಾಸನಗಳಲ್ಲಿ ಬಸವಣ್ಣನವರ ಚರಿತ್ರೆ ಸುದೀರ್ಘವಾಗಿ ಉಲ್ಲೇಖಿತವಾಗದಿದ್ದರೂ ಬಸವಣ್ಣನವರ ಹೆಸರು ಕಾರ್ಯಸಿದ್ದಿಯ ಕ್ಷೇತ್ರ, ಇತ್ಯಾದಿಗಳ ಉಲ್ಲೇಖ ಕಂಡು ಬರುತ್ತವೆ.

ಬಸವಣ್ಣನವರ ಹೆಸರನ್ನು ಪ್ರಸ್ತಾಪಿಸುವ ಶಾಸನಗಳು:

ಬಸವಣ್ಣನವರ ಪರ್ಯಾಯ ನಾಮಗಳನ್ನು ಪ್ರಸ್ತಾಪಿಸುವ ಈ ಕೆಳಗಿನ ಶಾಸನಗಳು ಸಂಶೋಧಕರಿಂದ ಮಾನ್ಯತೆ ಪಡೆದ ಸರ್ವ ಸಮ್ಮತವಾದ ಶಾಸನಗಳಾಗಿವೆ.

ಈ ಶಾಸನಗಳಲ್ಲಿಯ ಉಲ್ಲೇಖಿತ ವ್ಯಕ್ತಿಯ ಹೆಸರುಗಳು ಬಸವಣ್ಣನವರ ಪರ್ಯಾಯ ನಾಮಗಳಾಗಿದ್ದು ಬಸವಣ್ಣನವರಿಗೆ ಸಂಬಂಧಿಸಿದವುಗಳಾಗಿವೆ.

  • ಹೊಯ್ಸಳ ಸೋಮೇಶ್ವರರ ಕಣ್ಣಾನೂರ ಶಾಸನ ಕ್ರಿ. ಶ. ೧೨೫೧ - ಕರಸ್ಥಳ ಬಸವಿ ದೇವ
  • ಹೊಯ್ಸಳ ನರಸಿಂಹ- ೩ರ ಹಿರಿಯೂರು ಶಾಸನ ಕ್ರಿ.ಶ. ೧೨೫೯ - ಬಸವಯ್ಯ
  • ಕ್ರಿ.ಶ. ೧೨೬೦ ರ ಅರ್ಜುನವಾಡ ಶಾಸನ - ಬಸವರಾಜ, ಸಂಗನ ಬಸವ
  • ಕ್ರಿ.ಶ. ೧೨೬೩ ರ ಚೌಡದಾನಪುರದ ೨ ಶಾಸನಗಳು - ಸಂಗಮೇಶನ ಪುತ್ರ ಬಸವಯ್ಯ ಸಂಗನಬಸವ
  • ಕ್ರಿ.ಶ. ೧೨೭೯ ರ ಕಲ್ಲೇದೇವರ ಪುರದ ಶಾಸನದಲ್ಲಿಯ ಬಸವರಾಜ ಸಂಗನಬಸವಯ್ಯ
  • ಕ್ರಿ.ಶ. ೧೨೮೦ ರ ಮರಡಿ ಪುರದ ಶಾಸನದಲ್ಲಿಯ ಸಂಗನ ಬಸವಯ್ಯ
  • ಕ್ರಿ.ಶ. ೧೪ನೇ ಶತಮಾನದ ಗುಡಿಹಾಳ, (ಮುದ್ದೆಬಿಹಾಳ ತಾಲ್ಲೂಕ, ಬಿಜಾಪುರ ಜಿಲ್ಲೆ) ಶಾಸನದಲ್ಲಿಯ, ಸಂಗನ ಬಸವರಾಜ ದೇವರು
  • ಕ್ರಿ.ಶ. ೧೬೮೦ ರ ಜೋಡಿದಾಸೇನ ಹಳ್ಳಿಯ ಶಾಸನದಲ್ಲಿಯ ಬಸವರಾಜೇಂದ್ರ
  • ಕ್ರಿ.ಶ. ೧೬೬೦ ರ ಆನಂದಪುರ ಮಠದ ತಾಮ್ರ ಶಾಸನದಲ್ಲಿಯ ಬಸವೇಶ್ವರ
  • ಕ್ರಿ.ಶ. ೧೭೦೦ ರ ಕಾನಕಾನಹಳ್ಳಿಯ ಎರಡು ತಾಮ್ರ ಶಾಸನದಲ್ಲಿಯ ಬಸವೇಶ್ವರ ಸ್ವಾಮುಲು ಕಲ್ಯಾಣದ ಬಸವಪ್ಪನವರು.
ಕ್ರಿ. ಶ. ೧೨೬೦ ರ ಅರ್ಜುನವಾಡ ಶಾಸನ

ಮಂಗಲ ಕೀರ್ತಿ ಪುರಾತನ
ಜಂಗಮ ಲಿಂಗೈಕ್ಯ ಭಕ್ತಿ ನಿರ್ಭರ ಲೀಲಾ
ಸಂಗಂ ಸಂಗನ ಬಸವಂ
ಸಂಗತಿಯಂ ಮಾಳ್ಕೆ ಭಕ್ತಿಯೊಳನವರತಂ

ಎಂದೂ ಸಮಯಭಕ್ತಿ ಸಂಪನ್ನಂ ಎಂದು ಸ್ತುತಿಸಿದೆ. ಈ ಪದ್ಯದಲ್ಲಿಯ ಪರಾತನ ಜಂಗಮ ಲಿಂಗೈಕ ಭಕ್ತಿ ನಿರ್ಭದ ಲೀಲಾಸಂಗಂ ಸಮಯಭಕ್ತಿ ಸಂಪನ್ನ ಎನ್ನುವ ವಿಶೇಷಣಗಳು ಆಗಿನ ಕಾಲಕ್ಕೆ ಬಸವಣ್ಣನವರು ಪಡೆದಿದ್ದ ಕೀರ್ತಿ, ಪಸರಿಸಿದ್ದ ಪ್ರಭಾವ ಇವುಗಳನ್ನು ಸೂಚಿಸುತ್ತದೆ.

ಕ್ರಿ.ಶ೧೨೫೯ರ ಹಿರಿಯೂರ ( ಅರಸಿಕೆರೆ ತಾಲೋಕು) ಶಾಸನದಲ್ಲಿ ತಮಿಳುನಾಡಿನ ಅತಿಪುರಾತನರು ಹಾಗೂ ಪ್ರಾಚೀನ ಶರಣರ ಸಾಲಿನಲ್ಲಿ ಬಸವಣ್ಣನವರನ್ನು “ಸಿರಿಯಾಳ್ವಂ ಬಸವಯ್ಯ ನೊಳ್ವೆಸೆವ…..ಬಾಣನುರಂ…..ಸಿಂಧುಬಲ್ಲಾಳನೀಧರೆ ಕೊಂಡಾಡುವ ದಾಸಿಮಯ್ಯನೆನಿಸಿರ್ದೀ ಭಕ್ತಸಂದೋಹವಾ… ಎಂದು ಉಲ್ಲೇಖಿಸಿದೆ. ಪುರಾತನರ ಶರಣರ ಸಾಲಿನಲ್ಲಿ ಬಸವಣ್ಣನವರನ್ನು ಮಾತ್ರ ಈ ಶಾಸನ ಪ್ರಸ್ತಾಪಿಸಿರುವುದು ಅವರ ಮಹಿಮೆಯ ದ್ಯೋತಕವಾಗಿದೆ.

ಕ್ರಿ.ಶ ೧೨೬೩ರ ಚೌಡದಾನಪುರ ಶಾಸನವು ಬಸವಣ್ಣನವರ ಲಿಂಗಜಂಗಮ ಸೇವೆ ಪ್ರಸಾದ ಸಿದ್ಧಿಗಳನ್ನು ವಿವರಿಸಿದೆ.

“ಲಿಂಗಕ್ಕೆ ಜಂಗಮಕ್ಕಂ
ಹಿಂಗದೆ ದಾಸತ್ವ ಮಾಳ್ಪುದೇ ಬೆಸನೆಂದಾ
ಸಂಗನಬಸವಂ”
“ಮೃಡಗಣ ವರಪ್ರಸಾದಮ
ಪಡೆದಂ ಜಗವರಿಯಲಂದು ಸಂಗನಬಸವಂ
ಪಡೆದ ಪ್ರಸಾದ ಸಿದ್ಧಿಯ"

ಎಂದು ಹೇಳಿದ್ದು ಬಸವಣ್ಣನವರ ವ್ಯಕ್ತಿತ್ವಕ್ಕೆ ಕಳಸ ಹಿಡಿದಂತಿದೆ. ಈ ವಿಶೇಷಣಗಳು ಬಸವಣ್ಣನವರ ಲಿಂಗ, ದಾಸೋಹ, ಜಂಗಮಗಳು ಸಮಾಜದ ಮೇಲೆ ದಟ್ಟವಾಗಿ ಬೀರಿದ್ದ ಪ್ರಭಾವದ ಪ್ರತೀಕವೆನಿಸಿವೆ.

ಕ್ರಿ.ಶ ೧೨೭೯ರ ಕಲ್ಲೇದೇವರಪುರ ಶಾಸನದಲ್ಲಿ ‘ಚೇರಚೋಳನಂಬಿ ಚಿಕ್ಕ, ಕಕ್ಕ, ಚೆಂನ ಹೊಂನ, ಬಂಕ, ಬಸವರಾಜ, ಭೊಜ ಮೊದಲಾದ ಮರ್ತ್ಯ ಲೋಕದ ಮಹಾಗಣಾಚಾರ ಧರಾಭಾರ ಧೌರೇಯ, ಲಿಂಗೈಕ್ಯಸಂಗ ಸದ್ಭಾವನಂ ಎಂಬುದಾಗಿ ಬಸವ ಪೂರ್ವಯುಗ ಹಾಗೂ ಬಸವ ಯುಗದ ಶರಣರನ್ನು ಕೀರ್ತಿಸಿದೆ. ಈ ಶಾಸನದಲ್ಲಿ ಮರ್ತ್ಯಲೋಕದ ಪುರಾತನನೂತನ ಮಹಾಗಣಗಳ ಸಮೂಹದ ನಡುವೆ ಬಸವಣ್ಣನ ಹೆಸರು ಪ್ರಸ್ತಾಪಿತವಾಗಿರುವುದು ಗಮನಿಸಬೇಕಾದ ಅಂಶವಾಗಿದೆ.

ಕ್ರಿ.ಶ ೧೨೮೦ ಮರಡಿಪುರ ಶಾಸನದಲ್ಲಿ ‘ ಓಹಿಲ, ಉದ್ಭಟ, ನಂಬಿ, ಕುಂಬಾರ ಗುಂಡ, ಆಂಡವಲ, ಕರಿಕಾಲ ಚೋಳ, ಭೋಗದೇವ, ಬಾಣ, ಮಯೂರ, ಕಾಳಿದಾಸ, ಕೇಶಿರಾಜ ದಣ್ನಾಯಕ, ಸುರಿಗೆಯ ಚಲ್ವಡರಾಯ, ಸಂಗನ ಬಸವಯ್ಯ, ಲಿನಿಮಿತಿ ಕೇಶವರಾಜ, ಜಗದೇವದಣ್ನಾಯಕ, ಏಕಾನ್ತದ ರಾಮಯ್ಯ, ಸೊನ್ನಲಿಗೆ ರಾಮಯ್ಯ, ಹುಲಿಗೆರೆಯ ಪೊನ್ನಯ್ಯ ನೆಲವಿಗೆಯ ಸಾಂತಯ್ಯ ಸಕಳಗಣ ಪರಿವೇಷ್ಟಿತ ಶ್ರೀ ಪ್ರಶಸ್ತಿ ಮಂಗಳಂ ಎಂಬುದಾಗಿ ಮರ್ತ್ಯಲೋಕದಲ್ಲಿ ಪ್ರಸಿದ್ಧರಾದ ನೂತನ ಪುರಾತನ ಗಣಂಗಳ ನಡುವೆ ಬಸವಣ್ಣನವರನ್ನು ಉಲ್ಲೇಖಿಸಿದೆ. ಬಸವಣ್ಣನವರನ್ನು ಸಂಗನ ಬಸವಯ್ಯ ಎಂದು ಉಲ್ಲೇಖಿಸಿದ್ದಾರೆ. ಇದು ಬಸವಣ್ಣನವರ ಇಷ್ಟದೈವ ಸಂಗಮೇಶ್ವರ ಮತ್ತು ಬಸವಣ್ಣನವರ ನಡುವಿನ ದೈವೀ ಸಂಬಂಧವನ್ನು ಸೂಚಿಸುತ್ತದೆ.

ಕ್ರಿ.ಶ. ೧೨೬೦ರ ಅರ್ಜುನವಾಡ ಶಾಸನದಲ್ಲಿ ಶ್ರೀಬಸವಂಣ ದಂಣಾಯಕರ ಕೆಯ್ ಎಂಬ ಉಲ್ಲೇಖವಿದ್ದು ಬಸವಣ್ಣನವರನ್ನು ದಂಡನಾಯಕ ಎಂದು ಕೀರ್ತಿಸಲಾಗಿದೆ.

ಬಸವಣ್ಣನವರಿಗೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳನ್ನು ಪ್ರಸ್ತಾಪಿಸಿರುವ ಕ್ರಿ. ಶ. ೧೨೬೦ ರ ಅರ್ಜುನವಾಡ ಶಾಸನ , ಕ್ರಿ.ಶ. ೧೨೫೯ ರ ಹಿರಿಯೂರು ಶಾಸನ, ಕ್ರಿ.ಶ. ೧೨೬೩ ರ ಚೌಡದಾನಪುರದ ೨ ಶಾಸನಗಳು ಹರಿಹರ-ಪಾಲ್ಕುರೆಕೆ ಸೋಮನಾಥರು ಬಸವಣ್ಣನವರ ಕುರಿತು ಕಾವ್ಯ ಪುರಾಣಗಳನ್ನು ರಚಿಸುವುದಕ್ಕಿಂತ ಪೂರ್ವದಲ್ಲಿ ಹಾಕಿಸಲ್ಪಟ್ಟವುಗಳಾಗಿವೆ. ಬಸವಣ್ಣನವರ ಜೀವಿತದ ವಿವರ, ವ್ಯಕ್ತಿತ್ವ ಇತ್ಯಾದಿಗಳನ್ನು ಗುರುತಿಸುವಲ್ಲಿ ಇವು ವಿಶ್ವಾಸನೀಯಗಳಾಗಿವೆ.

ಗ್ರಂಥ ಋಣ:
೧) ಎಂ. ಎಂ. ಕಲಬುರ್ಗಿ, ಶಾಸನಗಳಲ್ಲಿ ಶಿವಶರಣರು, ವೀರಶೈವ ಅಧ್ಯಯನ ಸಂಸ್ಥೆ, ಡಂಬಳ ಗದಗ, ೧೯೭೮
೨) ಸಿ. ನಾಗಭೂಷಣ, ಶಾಸನಗಳು ಮತ್ತು ಕನ್ನಡ ಸಾಹಿತ್ಯ, ಪ್ರಸಾರಾಂಗ, ಗುಲಬರ್ಗಾ ವಿಶ್ವ ವಿದ್ಯಾಲಯ, ಗುಲಬರ್ಗಾ, ೨೦೦೫
೩) ಡಾ. ಪಿ. ಬಿ. ದೇಸಾಯಿ, Basaveshwara and his times, ಬಸವ ಸಮಿತಿ, ಬಸವ ಭವನ ಬೆಂಗಳೂರು, ೧೯೬೮.

ಪರಿವಿಡಿ (index)
Previous ಬಸವಣ್ಣ ಕುರಿತು ಕವಿಗಳು ವಿಶ್ವಗುರು ಬಸವಣ್ಣನವರ ಸಂಕ್ಷಿಪ್ತ ಪರಿಚಯ Next