Back to Top
Previous ಗಾವುದಿ ಮಾಚಯ್ಯ ಗುಪ್ತ ಮಂಚಣ್ಣ Next

ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ

*
ಅಂಕಿತ: ಕುಂಭೇಶ್ವರ
ಕಾಯಕ: ಗಡಿಗೆ ಸಿದ್ಧಪಡಿಸುವುದು

೭೭೩
ಲಿಂಗವಂತರ ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ
ಲಿಂಗಾರ್ಪಿತವ ಮಾಡುವಲ್ಲಿ ಸಂದೇಹವಿಲ್ಲದಿರಬೇಕು.
ಅದೆಂತೆಂದಡೆ:
'ಬಿಕ್ಷಲಿಂಗಾರ್ಪಿತಂ ಗತ್ವಾ | ಭಕ್ತಸ್ಯ ಮಂದಿರಂ ತಥಾ |
ಜಾತಿ ಜನ್ಮ ರಜೋಚ್ಫಿಷ್ಟಂ | ಪ್ರೇತಸ್ಯ ವಿವರ್ಜಿತಃ |
ಇಂತೆಂದುದಾಗಿ, ಕಾಣದುದನೆ ಚರಿಸದೆ, ಕಂಡುದನು ನುಡಿಯದೆ.
ಕಾಣದುದನು ಕಂಡುದನು ಒಂದೆಸಮವೆಂದು ಅರಿಯಬಲ್ಲರೆ
ಕುಂಭೇಶ್ವರಲಿಂಗವೆಂಬೆನು.

ಈಕೆ ಕುಂಬಾರ ಗುಂಡಯ್ಯನ ಸತಿ. ಕಾಲ - ೧೧೬೦. ಬೀದರ ಜಿಲ್ಲೆಯ ಭಾಲ್ಕಿ (ಭಲ್ಲುಂಕೆ) ಈಕೆಯ ಸ್ಥಳ. ಗಡಿಗೆ ಸಿದ್ಧಪಡಿಸುವುದು ಕಾಯಕ. ಎರಡು ವಚನಗಳು ದೊರೆತಿವೆ. 'ಕುಂಭೇಶ್ವರ' ಅ೦ಕಿತ. ವ್ರತಾಚಾರವನ್ನು ಕುರಿತು ವೃತ್ತಿ ಪರಿಭಾಷೆಯಲ್ಲಿ ತುಂಬ ಸೊಗಸಾಗಿ ನಿರೂಪಿಸಿದ್ದಾಳೆ.

೭೭೨
ಹದ ಮಣ್ಣಲ್ಲದೆ ಮಡಕೆಯಾಗಲಾರದು.
ವ್ರತಹೀನನ ಬೆರೆಯಲಾಗದು.
ಬೆರೆದಡೆ ನರಕ ತಪ್ಪದು
ನಾನೊಲ್ಲೆ ಬಲ್ಲೆನಾಗಿ, ಕುಂಭೇಶ್ವರಾ.


*
Previous ಗಾವುದಿ ಮಾಚಯ್ಯ ಗುಪ್ತ ಮಂಚಣ್ಣ Next