Previous ಬಳಕೆದಾರರ ಒಪ್ಪಂದಗಳು (ನಿಬಂಧನೆಗಳು) ಲಿಂಗಾಯತ ಧರ್ಮ ಗುರು Next

ಈ ತಾಣ ಆರಂಭಿಸಲು ಕಾರಣ ಮತ್ತು ನನ್ನ ಕಿರು ಪರಿಚಯ

ಶರಣು,

ಈ ಅಂತರಜಾಲ ತಾಣ ಸಂದರ್ಶಿಸಿದಕ್ಕೆ ಧನ್ಯವಾದಗಳು!

ಲಿಂಗಾಯತ ಧರ್ಮದ ಬಗ್ಗೆ ಕನ್ನಡ ಭಾಷೆಯಲ್ಲಿ ಯಾವುದೇ ಅಂತರಜಾಲ ತಾಣ (website) ಇಲ್ಲದ್ದನ್ನು ಕಂಡು ನಾವು ಈ ಅಂತರಜಾಲ ತಾಣ ಪ್ರಾರಂಭಸಿದ್ದೇವೆ. ನಾವು ಕಾಲ ಕಾಲಕ್ಕೆ ಈ ತಾಣವನ್ನು ಅಭಿವೃದ್ಧಿ ಪಡಿಸುತ್ತೇವೆ. ಇದು ನಮ್ಮ ಲಿಂಗಾಯತ ಧರ್ಮವನ್ನು ಬೆಳಕಿಗೆ ತರುವ ಸಣ್ಣ ಪ್ರಯತ್ನವಾಗಿದೆ. ಈ ನಮ್ಮ ಪ್ರಯತ್ನಕ್ಕೆ ಓದುಗರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ನಮಗೆ ಪ್ರೋತ್ಸಾಹಿಸುವಿರೆಂದು ಆಶಿಸುತ್ತೇವೆ.

ನಾನು ಹುಟ್ಟಿ ಬೆಳೆದದ್ದು ಬೀದರನಲ್ಲಿ, ಅಲ್ಲಿಯೇ ನನ್ನ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಮುಗಿಸಿ ಮುಂದೆ ವಿಜ್ಞಾನ ವಿಷಯದಲ್ಲಿ ಪದವಿ ಪಡೆದು, ಮಹಾರಾಷ್ಟ್ರದ ಔರಂಗಾಬಾದನಲ್ಲಿ ಗಣಕಯಂತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಮುಗಿಸಿದೆ. ನಮ್ಮ ಕುಟುಂಬವು ಧಾರ್ಮಿಕ ಆಚರಣೆಯಲ್ಲಿ ಯಾವಾಗಲು ಒಂದು ಹೆಜ್ಜೆ ಮುಂದು ಅದರ ಫಲವಾಗಿಯೆ ನಾನು ಚಿಕ್ಕಂದನಿಂದಲೆ ಧಾರ್ಮಿಕ ಹಬ್ಬ ಹರಿದಿನ ಹಾಗೂ ಪ್ರವಚನ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೆ. ೯೦ರ ದಶಕದಲ್ಲಿ ಲಿಂಗೈಕ್ಯ ಪೂಜ್ಯ ಲಿಂಗಾನಂದ ಸ್ವಾಮಿಗಳ ಪ್ರವಚನ ಕೇಳಿ ಪ್ರಭಾವಿತನಾಗಿ ಧರ್ಮ ಎಂದರೇನು? ಧರ್ಮ ಯಾಕೆ ಬೇಕು? ಜೀವನ ಎಂದರೆ ಬರಿ ಪ್ರಾಪಂಚಿಕ ಜೀವನವಷ್ಟೆ ಅಲ್ಲ ಆಧ್ಯಾತ್ಮಿಕವು ಇರಬೇಕು ಅಂತ ತಿಳಿದುಕೊಂಡೆ. ನಿಜವಾದ ಲಿಂಗಾಯತ ಧರ್ಮದ ಬಗ್ಗೆ ತಿಳಿದು ಕೊಂಡೆ. ವಿವಿಧ ಧಾರ್ಮಿಕ ಸಮ್ಮೇಳನದಲ್ಲಿ ಭಾಗಿಯಾದೆ ಕೂಡಲಸಂಗಮ, ಬೆಂಗಳೂರು, ಹಾಗೂ ಬೇರೆ ಬೇರೆ ನಗರದಲ್ಲಿ ನಡೆದ ಲಿಂಗಾಯತ ಧರ್ಮದ ವಿಚಾರ ಕಮ್ಮಟ/ತರಬೇತಿ ಶಿಬಿರಗಳಲ್ಲಿ ಭಾಗವಹಿಸಿದೆ.

ಸಾಫ್ಟ್ ವೇರ್ ವೃತ್ತಿಯಲ್ಲಿದ್ದ ನಾನು ಒಮ್ಮೆ ನಮ್ಮ ಲಿಂಗಾಯತ ಧರ್ಮದ ಬಗ್ಗೆ ಅಂತರ್ಜಾಲದಲ್ಲಿ ಹುಡುಕುತ್ತಿರುವಾಗ ನನಗೆ ಸಿಕ್ಕ ಮಾಹಿತಿ ನೋಡಿ ತುಂಬಾ ಬೇಸರವಾಯಿತು. ಕಾರಣ ಇಷ್ಟೆ ಯಾವ ಜಾಲದಲ್ಲೂ ಪೂರ್ಣವಿವರಗಳು, ಶರಣರ ಚಿತ್ರಗಳು ಪೂರಕವಾಗಿ ದೊರೆಯಲಿಲ್ಲ, ಒಂದೆರಡು ಜಾಲಗಳು ಅದಕ್ಕೆ ಅಪವಾದ. ಆದರೂ ಅವುಗಳಲ್ಲಿ ಎಲ್ಲಾ ವಿವರ ದೊರೆಯುವುದು ತುಂಬಾ ಕಷ್ಟ. ಅಂದೆ ನಾನು ಪ್ರಸ್ತುತ ಯೋಜನೆಯನ್ನು ಸಿದ್ಧಪಡಿಸಲು ಪ್ರಾರಂಭಿಸಿದೆ. ನನಗೆ ಬಿಡುವ ಸಿಗುತ್ತಿದ್ದದ್ದು ಶನಿವಾರ, ಭಾನುವಾರ ಮಾತ್ರ. ಮೊದಲು ಮಾಹಿತಿ ಸಂಗ್ರಹಣೆಗೆ ಬೇಕಾದ ಪಟ್ಟಿಯನ್ನು ತಯಾರಿಸಿ. ಅದರಂತೆ ಅನೇಕ ಪುಸ್ತಕ ಪತ್ರಿಕೆ, ಅಂತರ್ಜಾಲ ತಾಣದ ಲೇಖನಗಳ ಸಹಕಾರದಿಂದ ಮಾಹಿತಿ ಸಂಗ್ರಹಿಸುತ್ತ ಹೋದೆ.

ಮೊದಲು ಆಂಗ್ಲ ಭಾಷೆಯಲ್ಲಿ ಗೂಗಲ್ ನ ಉಚಿತ ತಾಣ ಸೇವೆಯನ್ನು ಉಪಯೋಗಿಸಿಕೊಂಡು ೨೦೦೭ರಲ್ಲಿ "ಲಿಂಗಾಯತ ಸೈಟ್" ಅನ್ನುವ ಆಂಗ್ಲ ಭಾಷೆಯ ತಾಣ ಪ್ರಾರಂಭಿಸಿದೆ. (ಈಗ ಇದನ್ನು ಮುಚ್ಚಲಾಗಿದೆ.). ನನ್ನ ಆರ್ಥಿಕ ಪರಿಸ್ಥಿತಿ ಸುಧಾರಿಸಿದಂತೆ ನಾನು lingayatreligion.com ಎಂಬ ಹೆಸರನ್ನು ಅಂತರ್ಜಾಲದಲ್ಲಿ ನೋಂದಾಯಿಸಿ ನಮ್ಮದೆ ಸ್ವಂತ ತಾಣ ೨೦೧೧ರಲ್ಲಿ ಪ್ರಾರಂಭಿಸಿದೆ. lingayatreligion.com ತಾಣವು ಬೆಂಗಳೂರಿನ ಟೌನ್ ಹಾಲ್ ನಲ್ಲಿ ದಿನಾಂಕ ಆಗಸ್ಟ ೪, ೨೦೧೧ ರಂದು ಪೂಜ್ಯ ಶ್ರೀ ಮಹಾ ಜಗದ್ಗುರು ಮಾತೆ ಮಹಾದೇವಿಯವರ ನೇತ್ರತ್ವದಲ್ಲಿ ನಡೆದ ೮೧೬ನೇಯ ಬಸವ ಪಂಚಮಿ ಕಾರ್ಯಕ್ರಮದಲ್ಲಿ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ ಜೆ. ಎಸ್. ಪಾಟಿಲ ಅವರಿಂದ ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮದಲ್ಲಿ. ಶರಣ ಶ್ರೀ ಅರವಿಂದ ಜತ್ತಿ ಅಧ್ಯಕ್ಷರು ಬಸವ ಸಮಿತಿ ಬೆಂಗಳೂರು ಮತ್ತು ಡಾ. ಡಿ ಬಾಲಗಣಪತಿ, Associate Professor Department of Comparative Philosophy and Religion, Kuppam University Associate Professor Department of Comparative Philosophy and Religion, Kuppam University ಮತ್ತು ಇತರ ಸ್ವಾಮಿಜಿಯವರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ನಮ್ಮ ಧರ್ಮಭಾಷೆ ಕನ್ನಡ ಆದರೆ ಕನ್ನಡದಲ್ಲಿ ನಮ್ಮ ಧರ್ಮದ ಬಗ್ಗೆ ಯಾವುದೆ ಅಂತರ್ಜಾಲ ತಾಣ ಇಲ್ಲ, ಹಾಗೆಯೆ ಎಲ್ಲಾ ಶರಣರ ಸಲಹೆ ಮೇರೆಗೆ ಪ್ರಸ್ತುತ lingayatreligion.comದಲ್ಲಿ ಕನ್ನಡದಲ್ಲಿಯು ಪ್ರಾರಂಭಿಸಲಾಗಿದೆ. ಇದಲ್ಲದೆ ತೆಲುಗು ಹಾಗು ಹಿಂದಿಯಲ್ಲಿಯು ಕೆಲವೊಂದು ಪುಟಗಳನ್ನು ಸೇರಿಸಲಾಗಿದೆ. ಅಲ್ಲದೆ ಮುಂದೆ ಮರಾಠಿ ಹಾಗೂ ಇತರ ಭಾಷೆಗಳಲ್ಲಿ, ಅಂತರ್ಜಾಲ ತಾಣ ನಿರ್ಮಾಣದ ನೀಲ ನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಲೇಖನಗಳನ್ನು ಅಹ್ವಾನಿಸಲಾಗಿದೆ ಆಸಕ್ತರು ದಯವಿಟ್ಟು ಸಂಪರ್ಕಿಸಿ. sscheral@gmail.com

ನಮ್ಮದು ಇ-ಮಾಧ್ಯಮದಲ್ಲ್ಲಿ ಹೆಚ್ಚು ಒಡನಾಟ. ಅಕ್ಷರಗಳ ಜತೆ ಆಗಾಗ ಕಾದಾಟ. ಕನ್ನಡದ ತಪ್ಪು ಒಪ್ಪುಗಳನ್ನು ತಿದ್ದಿ ತೀಡುವ ಜವಾಬ್ದಾರಿ ಈಗ ನಿಮ್ಮ ಕೈಲಿದೆ.ನಿಮ್ಮೆಲ್ಲ ಟೀಕೆ-ಟಿಪ್ಪಣಿಗಳಿಗೆ ಮುಕ್ತ ಸ್ವಾಗತ. ನಮ್ಮ ಲಿಂಗಾಯತ ಧರ್ಮವನ್ನು ಚೆಂದಗಾಣಿಸುವ ಹೊಣೆ ನಮ್ಮೆಲ್ಲರದ್ದಾಗಿದೆ ಎಂಬ ಆಶಯವನ್ನು ನಾವು ಹೊಂದಿದ್ದೇವೆ.ಇಲ್ಲಿರುವ ಮಾಹಿತಿಗಳಲ್ಲಿ ಎಷ್ಟೋ ತಪ್ಪಿರಬಹುದು ಅಥವಾ ಮಾಹಿತಿ ಲೋಪವಾಗಿರಬಹುದು. ದಯವಿಟ್ಟು ತಿಳಿದವರು ಸಹಕರಿಸಿ ಮಾಹಿತಿ ಸಂಗ್ರಹಣೆ ಹಾಗೂ ವಿತರಣೆಯ ಕ್ರಾಂತಿಗೆ ನಾಂದಿ ಹಾಡಿ. ಈ ಅಂತರ್ಜಾಲ ತಾಣಗಳ ಮೂಲಕ ಪ್ರಪಂಚದ ಎಲ್ಲಾ ಮೂಲೆಗಳಲ್ಲಿರುವ ಜನರಿಗೆ ನಮ್ಮ ಧರ್ಮದ ಪರಿಚಯ ಮಾಡಿಕೊಡ್ತಾ ಇದ್ದೆನೆ. ನಶಿಸುತ್ತಿರುವ ನಮ್ಮ ಧರ್ಮ, ಸಂಸ್ಕೃತಿಯ ಉಳಿವಿಗಾಗಿ ಈ ಒಂದು ಸಣ್ಣ ಪ್ರಯತ್ನವನ್ನು ಮಾಡುತ್ತಿರುವೆ. ಬನ್ನಿ ನಮ್ಮೊಡನೆ ಕೈ ಜೋಡಿಸಿ.

ಕನ್ನಡ ಅಂತರ್ಜಾಲ ತಾಣ ನಿರ್ಮಾಣಕ್ಕೆ ನಾವು ವಿಶ್ವಕಲ್ಯಾಣ ಮಿಷನ ಬೆಂಗಳೂರು ಪ್ರಕಾಶಿಸಿರುವ ಸುಮಾರು ಪುಸ್ತಕಗಳನ್ನು ಉಪಯೋಗಿಸಿಕೊಂಡಿದ್ದೇವೆ, ವಿಶ್ವಕಲ್ಯಾಣ ಮಿಷನ ಅದ್ಯಕ್ಷರು ಹಾಗೂ ಕೂಡಲ ಸಂಗಮದ ಬಸವ ಧರ್ಮದ ಮಹಾ ಜಗದ್ಗುರು ಪೀಠದ ಪೂಜ್ಯ ಶ್ರೀ ಡಾ. ಮಾತೆ ಮಹಾದೇವಿ ಯವರಿಗೆ ನಮ್ಮ ಅನಂತ ಶರಣುಗಳು. ಇದಲ್ಲದೆ ವಿವಿಧ ಲೇಖನಗಳನ್ನು ಬರೆದು ಕೊಟ್ಟ ಎಲ್ಲಾ ಬರಹಗಾರರಿಗೆ ಅದರಲ್ಲು ವಿಶೇಷವಾಗಿ ಡಾ. ಎಂ. ಎಂ. ಕಲಬುರ್ಗಿ, ಡಾ. ಎನ್. ಜಿ. ಮಹಾದೇವಪ್ಪ, ಬಸವ ಶ್ರೀ ರಮಜಾನ ದರ್ಗಾ ಅವರಿಗೆ ನನ್ನ ವತಿಯಿಂದ ಅನಂತ ಧನ್ಯವಾದಗಳು. ನನ್ನೆಲ್ಲ ಹುಡುಗಾಟ, ಹುಚ್ಚಾಟಗಳನ್ನು ಸಹಿಸಿಕೊಂಡು ನನ್ನನ್ನು ಅನಿವಾರ್ಯವಾಗಿ ಒಪ್ಪಿಕೊಂಡು, ಏನಾದರೂ ಮಾಡಿ, ಒಟ್ಟಿನಲ್ಲಿ ಒಳ್ಳೆದು ಮಾಡಿ ಸಾಕು ಎಂದು ಬೈಗುಳ ರೂಪದಿ ಹಾರೈಸುವ ನಮ್ಮ ತಂದೆ- ತಾಯಿ ಹಾಗೂ ಕುಟುಂಬ ವರ್ಗದವರ ಸಹಕಾರವನ್ನು ಸ್ಮರಿಸುತ್ತೇನೆ.

ಅಂತಿಮವಾಗಿ ನನಗೆ ನೇರವಾಗಿ ಅಥವಾ ಪರೋಕ್ಷವಾಗಿ ಇದನ್ನು ನಿರ್ಮಿಸಲು ಸಹಾಯ ಮಾಡಿದ ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು.

ಈ ಅಂತರಜಾಲ ತಾಣದ ಬಗ್ಗೆ, ತಮ್ಮ ಅಭಿಪ್ರಾಯ, ಪ್ರಶ್ನೆ, ಪ್ರತಿಕ್ರಿಯೆ, ವಿಮರ್ಶೆಗಳನ್ನು ನೀವು Admin ಗೆ ಕಳುಹಿಸಬೇಕಾಗಿ ವಿನಂತಿ.

ನಮ್ಮ ಮುಂದಿನ ಯೋಜನೆಗಳು

ಲೇಖಕರಿಗೆ/ಬರಹಗಾರರಿಗೆ ವಿನಂತಿ: ಲಿಂಗಾಯತ ಧರ್ಮದ ಬಗ್ಗೆ ಲೇಖನಗಳನ್ನು Admin ಗೆ ಕಳುಹಿಸಬೇಕಾಗಿ ವಿನಂತಿ ನಮ್ಮ ತಂಡದಿಂದ ಆಯ್ಕೆಯಾದ ಲೇಖನಗಳನ್ನು ಈ ಅಂತರಜಾಲ ತಾಣದಲ್ಲಿ ಪ್ರಕಟಿಸಲಾಗುವುದು.

ಶರಣು ಶರಣಾರ್ತಿಗಳು,

*
Previous ಬಳಕೆದಾರರ ಒಪ್ಪಂದಗಳು (ನಿಬಂಧನೆಗಳು) ಲಿಂಗಾಯತ ಧರ್ಮ ಗುರು Next